ಕಲಘಟಗಿಯ ಕಾರ್ಯನಿರತ ಪತ್ರಕರ್ತರಿಂದ ಮನವಿ
Author : Vinayak M Bhat

ಕಲಘಟಗಿ ಪಟ್ಟಣದಲ್ಲಿ ಕಾರ್ಯ ನಿರತ ಪತ್ರಕರ್ತರಿಗಾಗಿ ಪತ್ರಿಕಾ ಭವನವನ್ನು ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಪತ್ರಕರ್ತರು ಬುಧವಾರ ತಹಸೀಲ್ದಾರ ಬಸವರಾಜ ಬೆಣ್ಣಿಶಿರೂರು ಅವರಿಗೆ ಮನವಿ ಸಲ್ಲಿಸಿದರು.
ದಾಸ್ತಿಕೊಪ್ಪದ ಪ್ರವಾಸಿ ಮಂದಿರಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಪತ್ರಕರ್ತರು ತಾಲೂಕಿನಲ್ಲಿ ದಶಕಗಳಿಂದಲೂ ಪತ್ರಕರ್ತರು ಕಾರ್ಯನಿರ್ವಹಿಸುತ್ತಾ ಬಂದಿದ್ದು, ಆದರೆ ಪತ್ರಿಕಾ ಭವನದ ಕೊರತೆಯಿಂದಾಗಿ ಪತ್ರಿಕಾಗೋಷ್ಟಿ, ಮಾಧ್ಯಮ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣಗಳು, ಸಂವಾದ, ಚರ್ಚಾಕೂಟ ನಡೆಸಲು ಇಲ್ಲಿಯವರೆಗೂ ಸಾಧ್ಯವಾಗಿರುವುದಿಲ್ಲ. ಯಾವುದೇ ಒಂದು ಕಟ್ಟಡ, ಹೋಟೆಲ್, ಬಯಲು ಪ್ರದೇಶಗಳಲ್ಲಿ ಪತ್ರಿಕಾಗೋಷ್ಠಿ ನಡೆಸುವ ಸ್ಥಿತಿ ಉದ್ಭವಿಸಿದೆ. ಬೇರೆ ತಾಲೂಕುಗಳಲ್ಲಿ ಪತ್ರಕರ್ತರಿಗಾಗಿ ಪತ್ರಿಕಾ ಭವನ ನೀಡಿ ತಾಲೂಕು ಆಡಳಿತ ಸೌಕರ್ಯ ಕಲ್ಪಿಸಿದೆ. ಸದ್ಯ ಕಲಘಟಗಿ ಪಟ್ಟಣದಲ್ಲಿ ಪತ್ರಿಕಾ ಭವನಕ್ಕೆ ನೀಡಲು ಹಲವು ಸರ್ಕಾರಿ ಕಟ್ಟಡಗಳು ಇದ್ದು, ತಾವುಗಳು ಒಂದು ಸುಸಜ್ಜಿತವಾದ ಕಟ್ಟಡವನ್ನು ನೀಡಿ ಪತ್ರಕರ್ತರಿಗೆ ಅನುಕೂಲ ಕಲ್ಪಿಸಬೇಕೆಂದು ಒಕ್ಕೂರಲಿನಿಂದ ಒತ್ತಾಯಿಸಿ ತಾಲೂಕು ನೂಡಲ್ ಅಧಿಕಾರಿ ಮೇಜರ್ ಡಾ ಸಿದ್ದಲಿಂಗಯ್ಯ ಹಿರೇಮಠ ಹಾಗೂ ತಾ. ಪಂ ಇಒ ಪರಶುರಾಮ್ ಸಾವಂತ ಸಮ್ಮುಖದಲ್ಲಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕಲ್ಲಪ್ಪ ಮಿರ್ಜಿ, ಉಪಾಧ್ಯಕ್ಷ ಪ್ರಕಾಶ್ ಲಾಮಾಣಿ, ಕಾರ್ಯದರ್ಶಿ ವಿರೇಶ ಹಾರೊಗೇರಿ, ರಾಕೇಶ ಅಳಗವಾಡಿ, ರಮೇಶ ಸೊಲ್ಲಾರಗೋಪ್ಪ, ಪ್ರಕಾಶ ದೂಪದ, ಪ್ರಲ್ಹಾದಗೌಡ ಗೊಲ್ಲಗೌಡ್ರ, ಗಿರೀಶ್ ಮುಕ್ಕಲ್ ವಿನಾಯಕ ಭಟ್, ಉಮೇಶ ಜೋಶಿ, ಉದಯ ಗೌಡರ್ ಇದ್ದರು.














