Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ಜಿಲ್ಲೆಯ ಸಾಧಕರಿಗೆ ಸನ್ಮಾನ ಹಾಗೂ ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಸಲಕರಣೆಗಳ ವಿತರಣೆ

ಜಿಲ್ಲೆಯ ಸಾಧಕರಿಗೆ ಸನ್ಮಾನ ಹಾಗೂ ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಸಲಕರಣೆಗಳ ವಿತರಣೆ



Author : Vinayak M Bhat

*2047ಕ್ಕೆ ಭಾರತ ದೇಶ ವಿಕಸಿತ ಭಾರತ ರಾಷ್ಟ್ರವಾಗಿ ಹೊರಹೊಮ್ಮಲಿದೆ*

*ದೇಶದಲ್ಲೇ ಮೊದಲ ಕ್ಷಯ ಮುಕ್ತ ಜಿಲ್ಲೆಯಾಗಿಸಲು ಪ್ರತಿಯೊಬ್ಬರೂ ಪಣತೊಡೋಣ*
*-ಸಂಸದ ಪ್ರಹ್ಲಾದ್ ಜೋಶಿ*

 ಕಲಘಟಗಿ :.17: ಭಾರತ ದೇಶ ಪೊಲೀಯೋ ಮುಕ್ತ ರಾಷ್ಟ್ರವಾದಂತೆ 2026 ರ ಮಾರ್ಚ ತಿಂಗಳೊಳಗೆ ಕ್ಷಯ ಮುಕ್ತ ರಾಷ್ಟ್ರವಾಗಬೇಕು. ಧಾರವಾಡ ಜಿಲ್ಲೆಯನ್ನು ದೇಶದಲ್ಲೇ ಮೊದಲ ಕ್ಷಯ ಮುಕ್ತ ಜಿಲ್ಲೆಯಾಗಿಸಲು ಪ್ರತಿಯೊಬ್ಬರೂ ಪಣತೊಡೋಣ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ ಜೋಶಿ ಹೇಳಿದರು.


ಇಂದು ಕಲಘಟಗಿ ತಾಲೂಕು ಆಸ್ಪತ್ರೆ ಆವರಣದಲ್ಲಿ "ಆರೋಗ್ಯವಂತ ಮಹಿಳೆ, ಸಶಕ್ತ ಪರಿವಾರ ಅಭಿಯಾನದ" ಉದ್ಘಾಟನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.


ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಜಯಂತಿಯ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನವನ್ನು ಆಚರಣೆ ಮಾಡಲಾಗುತ್ತದೆ. ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ 15 ದಿನಗಳ ಕಾಲ ಸೇವಾ ಪಾಕ‌್ಷಿಕ ಎಂದು ಆಚರಿಸಲಾಗುವುದು. 15 ದಿನಗಳ ಕಾಲ ತಾವು ವಾಸಿಸುವ ಬಡಾವಣೆ, ಶಾಲೆ, ಕಾಲೇಜು, ಉದ್ಯಾನವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಸಂದರ್ಭದಲ್ಲಿ ಜನರಿಗೆ ಉತ್ತಮ ಸೇವೆ ಸಲ್ಲಿಸಲಾಗುತ್ತದೆ. ಒಬ್ಬ ಮಹಿಳೆ ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿರುವುದು. ಸ್ವಾಸ್ಥ್ಯ ನಾರಿ ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಕ್ತದೊತ್ತಡ, ಡಯಾಬಿಟಿಸ್, ಬಾಯಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್, ರಕ್ತಹೀನತೆ ಸೇರಿದಂತೆ ಹಲವಾರು ರೋಗಗಳ ತಪಾಸಣೆ ಮಾಡಲಾಗುತ್ತದೆ. ತಪಾಸಣೆ ಶಿಬಿರದಲ್ಲಿ ವಿತರಿಸುವ ಔಷಧಿಗಳನ್ನು ಸತತವಾಗಿ ತೆಗೆದುಕೊಳ್ಳಬೇಕು. ಇದರಿಂದ ರೋಗಗಳನ್ನು ಕಡಿಮೆ ಸಮಯದಲ್ಲಿ ಗುಣಪಡಿಸಬಹುದು ಎಂದು ಅವರು ತಿಳಿಸಿದರು.


ಸ್ವಚ್ಛ ಭಾರತ ಅಭಿಯಾನದ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಲೆ, ಅಡಿಕೆ, ಗುಟಕಾ ತಿಂದು ಎಲ್ಲೆಂದರಲ್ಲಿ ಉಗುಳಬಾರದು. ಚಟಗಳನ್ನು ಮಾಡುವವರು ಶಕ್ತಿವಂತರಾಗಿರುವುದಿಲ್ಲ. ಎಲ್ಲರೂ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬೇಕು. ನಶಾ ಮುಕ್ತ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುವುದು. ಸಿಎಸ್‌‌ಆರ್ ಅನುದಾನದಲ್ಲಿ ಶಾಲಾ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ 35 ಸಾವಿರ ಡೆಸ್ಕ ವಿತರಣೆ ಹಾಗೂ ಸುಮಾರು 800 ಶಾಲೆಗಳಿಗೆ ಬಣ್ಣವನ್ನು ಹಚ್ಚಲಾಗಿದೆ ಎಂದರು. 
 

*2047 ಕ್ಕೆ ಭಾರತ ದೇಶ ವಿಕಸಿತ ಭಾರತ*

2047ಕ್ಕೆ ಭಾರತ ದೇಶ ವಿಕಸಿತ ಭಾರತ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಈ ನಿಟ್ಟಿನಲ್ಲಿ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಎಲ್ಲರೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗುತ್ತದೆ‌. ಈಗಾಗಲೇ ಸುಮಾರು 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ ಎಂದು ಹಲವಾರು ಸಮೀಕ್ಷೆಗಳು ತಿಳಿಸಿವೆ. ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು. ಎಲ್ಲರೂ ಆರೋಗ್ಯವಂತರಾಗಬೇಕು ಎಂದು ಅವರು ಆಶಿಸಿದರು.


*ಪ್ರಧಾನಿ ಮೋದಿಯಂತೆ ನಾನು ಕೂಡ ನಿರ್ವಹಿಸುವೆ*

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 75 ನೇ ಜನ್ಮದಿನವನ್ನು ಇಂದು ಆಚರಣೆ ಮಾಡಲಾಗುತ್ತಿದೆ. ಅವರು ಈ ವಯಸ್ಸಿನಲ್ಲಿಯೂ ಸಹ ಅತ್ಯಂತ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ದಣಿವು ಇಲ್ಲದೇ ಸತತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅವರಂತೆಯೇ ನಾನು ಸಹ ನಿರಂತರವಾಗಿ ವಿವಿಧ ಕಾರ್ಯಕ್ರಮಗಳಲ್ಲಿ‌ ಭಾಗವಹಿಸುತ್ತಿದ್ದೇನೆ ಎಂದರು.


ಈ ಸಂದರ್ಭದಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದಡಿ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಫಲಾನುಭವಿ ತಾಯಂದಿರಿಗೆ ಸಹಾಯಧನ ಜಮೆ ಹಾಗೂ ಆರೋಗ್ಯ ತಪಾಸಣೆ, ಯುವಕ ಯುವತಿಯರಿಂದ ರಕ್ತದಾನ ಶಿಬಿರ,  ಶಿಶುಗಳಿಗೆ ಅನ್ನಪ್ರಾಶನ, ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರು, ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಉಚಿತವಾಗಿ ಸಹಾಯಕ ಸಾಧನ ಮತ್ತು ಉಪಕರಣಗಳನ್ನು ವಿತರಣೆ ಮಾಡಲಾಯಿತು.


ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಹೊನಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಹೆಚ್.ಹೆಚ್.ಕುಕನೂರ, ಮುಖಂಡರಾದ ನಾಗರಾಜ ಛಬ್ಬಿ, ನಿಂಗಪ್ಪ ಸುತಗಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು. 
******