ಸಾವಯವ ಕೃಷಿಗೆ ಒತ್ತು ನೀಡಿ – ಪುಷ್ಪ ಶೆಟ್ಟರ್
Author : Vinayak M Bhat
ಮುಂದಿನ ಯುವ ಪೀಳಿಗೆ ಆರೋಗ್ಯಕರ ಜೀವನ ಹಾಗೂ ಸಮಾಜ ನಿರ್ಮಾಣ ಮಾಡಲು ಸಾವಯವ ಕೃಷಿಯು ಅತೀ ಅವಶ್ಯ ಎಂದು ಕಲಘಟಗಿ ಕೃಷಿ ವಲಯ ವ್ಯವಸ್ಥಾಪಕಿ ಪುಷ್ಪ ಶೆಟ್ಟರ ಹೇಳಿದರು.

ತಾಲೂಕಿನ ಹುಲ್ಲಂಬಿ ಗ್ರಾಮದ ಕಲ್ಲಪ್ಪ ಪ ನಾಯ್ಕರ ಇವರ ಹೊಲಕ್ಕೆ ಭೇಟಿ ನೀಡಿ ಸಾವಯವ ಕೃಷಿ ಕುರಿತು ಮಾಹಿತಿ ಹೇಳಿದರು. ಜೀವಾಮೃತದಿಂದ ಸಮಗ್ರ ಕೀಟ ಹಾಗೂ ಬೆಳೆ ನಿರ್ವಹಣೆ ಆರೋಗ್ಯಕರ ಮಣ್ಣು, ದೇಸಿ ಬೆಳೆಗಳು, ಎರೆಹುಳು ಗೊಬ್ಬರ, ಇತ್ಯಾದಿಗಳಿಂದ ನಮ್ಮ ಮೂಲ ಕೃಷಿ ಉಳಿಸಿ ಆರೋಗ್ಯಕರ ಜೀವನ ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ವರದಿಗಾರರಿಗೆ ವಿವರ ನೀಡಿ ತಾಲೂಕಿನಲ್ಲಿ 28 ಗ್ರಾಮ ಪಂಚಾಯತಿಗಳು ಇದ್ದು, ಎಲ್ಲ ಗ್ರಾ.ಪಂಗಳಲ್ಲಿಯೂ ಎನ್.ಆರ್.ಎಲ್.ಎಂ ನ ಕೃಷಿ ಸಖಿಯರಿದ್ದು, ಸಾವಯವ ಕೃಷಿಗೆ ಆದ್ಯತೆ ಕೊಡಲು ಮಹಿಳಾ ಸಂಘ ಹಾಗೂ ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ಇದರ ಮೂಲ ಉದ್ದೇಶ ಕೃಷಿ ಕುಟುಂಬದ ಆದಾಯವನ್ನು ದ್ವಿಗುಣಗೊಳಿಸುವುದು, ಹಾಗೂ ಆರ್ಥಿಕವಾಗಿ ಸಬಲರನ್ನಾಗಿಸುವುದು ಮೂಲ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹೇಶ ಹುಲಕೊಪ್ಪ, ಕೃಷಿ ಸಖಿಯರಾದ ಬೇಗೂರ ಗ್ರಾ.ಪಂ ನ ಅನಸೂಯ ಸೋಮನಕೊಪ್ಪ, ದುಮ್ಮವಾಡ ಗ್ರಾ.ಪಂನ, ರೇಣುಕಾ ಆನಂದ ಹುಬ್ಬಳ್ಳಿ, ಹಾಗೂ ಸುತ್ತಲಿನ ರೈತರು ಉಪಸ್ಥಿತರಿದ್ದರು.













