ಅಕ್ರಮ ಸರಾಯಿ ನಿಷೇಧದತ್ತ ಮಹಿಳೆಯರ ಚಿತ್ತ
Author : Vinayak M Bhat
ಉಗ್ರ ಹೋರಾಟದ ಎಚ್ಚರಿಕೆ ನೀಡಿದ ನೆಲ್ಲಿಹರವಿ, ಜನತಾ ಪ್ಲಾಟ್, ಗರುಡಹೊನ್ನಳ್ಳಿ ಗ್ರಾಮದ ಮಹಿಳೆಯರು....
ಇತ್ತೀಚೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಸರಾಯಿಯ ಘಾಟು ಅಲ್ಲಲ್ಲಿ ಕೇಳಿ ಬರುತ್ತದೆ. ತಾಲೂಕಿನ ಬಮ್ಮಿಗಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಲ್ಲಿಹರವಿ, ಜನತಾ ಪ್ಲಾಟ್, ಹಾಗೂ ಗರುಡಹೊನ್ನಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಮದ್ಯಪ್ರಿಯರ ಹಾವಳಿಗೆ ಜನರು ರಾತ್ರಿ ನಿದ್ರೆ ಮಾಡದಂತ ವಿಷಮ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಯುವಕರೂ ಸಹ ದಾಸರಾಗಿ ದಿನದ ದುಡಿಮೆಯನ್ನೇ ನಂಬಿ ಜೀವನ ಸಾಗಿಸುವ ಕುಟುಂಬಗಳು ಬೀದಿಗೆ ಬರುತ್ತಿವೆ. ಗ್ರಾಮದಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ನಮಗೆ ಬೆದರಿಕೆ ಹಾಕುತ್ತಾರೆ. ಇದರ ಹಾವಳಿಯಿಂದ ಗ್ರಾಮಸ್ಥರು, ಮಕ್ಕಳು, ಮಹಿಳೆಯರು, ವೃದ್ಧರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಜನರ ಆರೋಗ್ಯ, ಸಾಮಾಜಿಕ ಸ್ವಾಸ್ತ್ಯ ಕಾಪಾಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಇವರು ಉಪ ತಹಶೀಲ್ದಾರ್ ಬಸವರಾಜ ಹೊಂಕಣ್ಣನವರ ಇವರಿಗೆ ಮನವಿ ಸಲ್ಲಿಸಿದರು. ನಂತರ ಗ್ರಾಮಸ್ಥರು, ಪೋಲಿಸ್ ಇಲಾಖೆ, ಅಬಕಾರಿ ಇಲಾಖೆ, ತಾಲೂಕು ಪಂಚಾಯತಿ ಹಾಗೂ ಸಚಿವರು ಸಂತೋಷಲಾಡ್ ಅವರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಂಕ್ರಪ್ಪ ಕುರಬರ, ಶೇಖಯ್ಯ ಅಣ್ಣಿಗೇರಿ, ಈರಪ್ಪ ಅಂಗಡಿ, ಮಹದೇವ ಬಾನಗಟ್ಟಿ, ಉಮೇಶ ಮಿರ್ಜಿ, ಗೌರಮ್ಮ ಕಂಬಿ, ದೇವಮ್ಮ ಬಾರಕೇರ, ಗಂಗವ್ವ ತಳವಾರ, ಮಹಬೂಬಿ ವಾಲಿಕಾರ, ಮರಿಯಮ್ಮ ಕಮ್ಮಾರ, ಹಾಗೂ ಮಹಿಳೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.














